ನಿನ್ನೆಯಷ್ಟೇ ಉಜ್ಜೈನಿಯಲ್ಲಿ ಬಂಧಿಸಲಾಗಿದ್ದ ಕುಖ್ಯಾತ ಪಾತಕಿ, ಗ್ಯಾಂಗ್ಸ್ಟರ್ ವಿಕಾಸ್ ದುಬೆ ಇಂದು ಪೋಲೀಸರ ಎನ್ಕೌಂಟರ್ ಗೆ ಹತನಾಗಿದ್ದಾನೆ. ತನ್ನ ಬಂಧನಕ್ಕೆ ಆಗಮಿಸಿದ್ದ 8 ಮಂದಿ ಪೊಲೀಸರನ್ನು ಹತ್ಯೆ ಮಾಡಿದ್ದ ವಿಕಾಸ್ ದುಬೆಯನ್ನು ನಿನ್ನೆ ಉಜ್ಜಯಿನಿಯಲ್ಲಿ ಬಂಧನಕ್ಕೊಳಪಡಿಸಲಾಗಿತ್ತು.
ಇಲ್ಲಿವರೆಗೆ ವಿಕಾಸ್ ದುಬೆಯ ನಾಲ್ಕಕ್ಕೂ ಹೆಚ್ಚು ಸಹಚರರು ಪೋಲೀಸರ ಎನ್ಕೌಂಟರ್ನಲ್ಲಿ ಹತರಾಗಿದ್ದಾರೆ. ಗುರುವಾರ ಬೆಳಿಗ್ಗೆಯಷ್ಟೇ ಎರಡು ಪ್ರತ್ಯೇಕ ಎನ್’ಕೌಂಟರ್ ನಲ್ಲಿ ಗ್ಯಾಂಗ್’ಸ್ಟರ್ ವಿಕಾಸ್ ದುಬೆಯ ಇಬ್ಬರು ಸಹಚರರನ್ನು ಪೋಲೀಸರು ಹೊಡೆದುರುಳಿಸಿದ್ದರು. ಇಂದು ಬೆಳಗ್ಗೆ ವಿಕಾಸ್ ದುಬೆಯು ಪೋಲೀಸರ ಎನ್ಕೌಂಟರ್ನಲ್ಲಿ ಹತನಾಗಿದ್ದಾನೆ.
ಉಜ್ಜೈನಿಯಿಂದ ಉತ್ತರಪ್ರದೇಶದ ಕಾನ್ಪುರಕ್ಕೆ ಕರೆತರುವ ವೇಳೆ ಪೊಲೀಸರ ಬೆಂಗಾವಲು ವಾಹನ ಮಗುಚಿದ್ದು, ಈ ನಡುವೆ ಪರಾರಿಯಾಗಲು ಯತ್ನಿಸಿದ ವಿಕಾಸ್ ದುಬೆ ಎನ್ಕೌಂಟರ್ನಿಂದ ಸಾವಿಗೀಡಾಗಿರುವುದಾಗಿ ವರದಿಯಾಗಿದೆ.
ಭಾರೀ ಮಳೆಯಿಂದಾಗಿ ರಸ್ತೆಯಲ್ಲಿ ವಾಹನ ಪಲ್ಟಿಯಾಗಿದ್ದು, ಈ ವೇಳೆ ಜೊತೆಗಿದ್ದ ಪೊಲೀಸರಿಂದ ರಿವಲ್ವಾರ್ ಕಸಿದು ವಿಕಾಸ್ ದುಬೆ ಪರಾರಿಯಾಗಲು ಯತ್ನಿಸಿದ್ದ. ಪೊಲೀಸರು ಗುಂಡು ಹಾರಿಸಿ ಪಾತಕಿ ದುಬೆಯನ್ನು ಕೊಂದರು ಎಂದು ಮಾಧ್ಯಮಗಳು ವರದಿ ಮಾಡಿದೆ.